Wednesday 6 November 2019

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕ ಬಂಡಿ
ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕ ಬಂಡಿ
ವಿಧಿ ಅಲೆದಾಡಿಸುವ ಬಂಡಿ

ಕಾಶೀಲಿ ಸ್ನಾನ ಮಾಡು
ಕಾಶ್ಮೀರ ಸುತ್ತಿ ನೋಡು
ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತಾ ಎಲ್ಲೋರನ ಬಾಳಲ್ಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚೆಂದಾನ ತೂಕಮಾಡು
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ
ಕನ್ನಡಾ.. ಕನ್ನಡಾ.. ಕಸ್ತೂರಿ ಕನ್ನಡಾ...

ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು, ಜ್ಞಾನಕ್ಕೆ ಪೀಠ ಇದು
ಕಾವ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು, ನಾದಾಂತರಂಗವಿದು
ಕುವೆಂಪು ಬೇಂದ್ರೆಯಿಂದ ಕಾರಂತ ಮಾಸ್ತಿಯಿಂದ
ಧನ್ಯವೀ ಕನ್ನಡ.... ಗೋಕಾಕಿನ ಕನ್ನಡಾ...

ಬಾಳಿನ ಬೆನ್ನು ಹತ್ತಿ
ನೂರಾರು ಊರು ಸುತ್ತಿ
ಏನೇನೋ ಕಂಡ ಮೇಲೂ
ನಮ್ಮೂರೇ ನಮಗೆ ಮೇಲು
ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು?
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು?
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ
ಇಲ್ಲಿಯೇ....ಇಲ್ಲಿಯೇ....
ಎಂದಿಗೂ ನಾನಿಲ್ಲಿಯೇ....
                                                                - ಹಂಸಲೇಖ

Saturday 2 November 2019

ದೀಕ್ಷೆಯ ತೊಡು ಇಂದೇ - ಕುವೆಂಪು

ದೀಕ್ಷೆಯ ತೊಡು ಇಂದೇ
ಕಂಕಣ ಕಟ್ಟಿಂದೇ
ಕನ್ನಡ ನಾಡೊಂದೇ
ಇನ್ನೆಂದೂ ತಾನೊಂದೇ

ನೃಪತುಂಗನ ದೊರೆಮುಡಿ ಸಾಕ್ಷಿ
ಪಂಪನ ಪದ ಧೂಳಿಯ ಸಾಕ್ಷಿ
ಕೂಡಲ ಸಂಗನ ಅಡಿ ಸಾಕ್ಷಿ
ಗದುಗಿನ ಕವಿದೇವನ ಸಾಕ್ಷಿ

ಇಡು ಸಹ್ಯಾದ್ರಿಯ ಮೇಲಾಣೆ
ಇಡು ಕಾವೇರಿಯ ಮೇಲಾಣೆ
ಇಡು ಚಾಮುಂಡಿಯ ಮೇಲಾಣೆ
ಇಡು ಗೊಮ್ಮಟ ಗುರುದೇವಾಣೆ

ಕಾಣಲಿ ಕನ್ನಡ ವ್ಯೋಮಾಕ್ಷಿ
ನಿಲ್ಲಲಿ ರವಿ ಚಂದ್ರರ ಸಾಕ್ಷಿ
ಕೇಳಲಿ ಕನ್ನಡ ಪಶು ಪಕ್ಷಿ
ಸರ್ವ ದೇವರೂ ಶ್ರೀ ಸಾಕ್ಷಿ

ಇಡು ನಿನ್ನಯ ಸತಿಯಾಣೆ
ಇಡು ನಿನ್ನಯ ಪತಿಯಾಣೆ
ಮಕ್ಕಳ ಮೇಲಾಣೆ
ಅಕ್ಕರೆ ಮೇಲಾಣೆ
ಗುರುದೇವರ ಆಣೆ
ನನ್ನಾಣೆ
ನಿನ್ನಾಣೆ
ತೊಡು ದೀಕ್ಷೆಯ
ಇಡು ರಕ್ಷೆಯ
ಕುವೆಂಪು

Thursday 29 September 2016

ವಿಧೂಷಕ

ಕಣ್ಣಂಚಲಿ ಹನಿ ಮೂಡಿದೆ
ಹೃದಯ ಬಿಕ್ಕಿ ಅಳುತಿದೆ
ಕನಸಿಗೆ ಕಾರ್ಮೋಡ ಕವಿದಿದೆ
ಮನಸೀಗ ಒಡೆದ ಕನ್ನಡಿಯಾಗಿದೆ

ಪ್ರತಿಯೊಂದು ಬಿಂಬ ನನ್ನ ನೋಡಿ ನಗುತಿರಲು
ಕೂಡಿಟ್ಟ ಕನಸು ಒಂದೊಂದೆ ಮರೆಮಾಚುತಿರಲು
ಜೀವವೇ ಕೂಗಿ ಕರೆದರೂ ಏಕೆ ದೂರಾದೆ ನೀ
ಶ್ವಾಸವೇ ನಿನಗಾಗಿ ತಿಳಿದಿದ್ದರೂ ತೊರೆದೆಯಾ ನೀ

ಹೊರಗೆ ಮಾತು ನೂರಿದ್ದರು
ಒಳಗೆ ಏಕಾಂತದಿ ಕಾಡುವ ಮೌನ
ಜಗದೆದುರು ವಿಧೂಷಕನಂತಿದ್ದರು
ಗುಂಡಿಗೆಯ ಗೂಡೊಳಗೆ ನೋವಿನ ನರ್ತನ

ನಿರಾಸೆಯ ಕಾರ್ಮೋಡ ಸರಿದು
ಸಂತೋಷದ ಬೆಳಕು ಹರಿವುದೆಂತು
ಬಯಕೆಗಳ ಬತ್ತಳಿಕೆ ಕೈಲಿ ಹಿಡಿದು
ಕಾಯುತಿರುವೆ ಭರವಸೆಯಲಿ ನಿಂತು